ನಿರುತ್ಸಾಹ ಮಿತಿ ಮೀರಿದಾಗ

ಮನುಷ್ಯರೆಂದಮೇಲೆ ಜೀವನದ ಏರು-ಪೇರುಗಳಿಂದಾಗುವ ತೊಂದರೆಗಳು ಸಾಮಾನ್ಯ.   ಇಂತಹ ಒಂದು ತೊಂದರೆಯಲ್ಲಿ ‘ನಿರುತ್ಸಾಹ’ (ಡಿಪ್ರೆಶನ್) ದಿನನಿತ್ಯದ ಕೆಲಸಗಳನ್ನು ಬುಡಮೇಲು ಮಾಡಿಬಿಡಬಲ್ಲ ಖಾಯಿಲೆ. ಇದನ್ನು ಖಿನ್ನತೆ ಎಂದು ಕರೆಯಲಾಗುತ್ತದೆ. ಆಹಾರ-ಔಷದ, ಜೀನವಶೈಲಿ ಒಂದು ಬಗೆಯ ಪಾತ್ರ-ಪರಿಹಾರವಾದರೆ, ಇಂದರಿಂದ ನಿರುತ್ಸಾಹಿಗಳ ಜತೆಯಲ್ಲಿ ಬದುಕುವವರ ಜೀವನವೂ ನರಕಮಯವಾಗಿ ಪರಿಣಮಿಸುತ್ತದೆ.

ಸದಾಕಾಲ ನಿಂದನೆ, ಶೋಷಣೆ, ಜಗಳವಾಡುತ್ತ ಕೆಟ್ಟ ಮಾತುಗಳಲ್ಲಿ ಬೈಯುತ್ತಾ, ಸಣ್ಣ ಸಣ್ಣ ವಿಚಾರಗಳಿಗೆ ತಲೆಕಿಡಿಸಿಕೊಳ್ಳುತ್ತಾ ನಕಾರಾತ್ಮಕವಾಗಿ ಬದುಕುತ್ತಿರುವುದನ್ನು ನಾವು ನೋಡುತ್ತೇವೆ.

ನಿರುತ್ಸಾಹಿಗಳು ಜಗಳಕ್ಕೆ, ಮಾತಿಗೆ, ವಿತಂಡವಾದಕ್ಕೆ ನಿಂತರೆ, ತಿಳಿದವರಾದ ನಾವು ಅವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು, ಈ ಕೆಳಗಿನ ಕೆಲವು ಮಾತುಗಳು ನಮಗೆ ಮಾರ್ಗದರ್ಶಕವಾಗಿವೆ ಎಂದು ನನ್ನ ನಂಬಿಕೆ.

೧. ಕೊಡವಿಕೊಂಡು ಬಿಡಬೇಕು, ಮನಸ್ಸಿಗೆ ಹಚ್ಚಿಕೊಳ್ಳಬಾರದು

ವೈಯಕ್ತಿಕವಾಗಿ ವಿಷಯಗಳನ್ನು ತೆಗೆದುಕೊಳ್ಳದಂತೆ ನೆನಪಿಡಿ. ಕೋಟಿ-ಕೋಟಿ ಜನರು ಈ ಪ್ರಪಂಚದಲ್ಲಿದಾರೆ, ಎಲ್ಲರಿಗೂ ಎಲ್ಲ ಸಮಯದಲ್ಲೂ ಒಳ್ಳೆಯ,ಉತ್ತಮವಾದ,ಹರ್ಷವಾದ,ಉಲ್ಲಾಸಕರ ಮನಸ್ಥಿತಿ ಇರುವುದಿಲ್ಲ.   ಯಾವ ನಿಮಿಷ ನಿಮಗೆ ಬೇರೆಯವರ ಮನಸ್ಥಿತಿ ನಿಮ್ಮ ಮೇಲೆ ಪರಿಣಾಮಬೀರಿ ನಿಮ್ಮನ್ನು ತೊಂದರೆಗೀಡು ಮಾಡುತ್ತದೋ ಅಥವಾ ನಿಮ್ಮ ಇರುವಿಕೆ ಅನ್ಯರ ಮನಸ್ಥಿತಿಯನ್ನು ಕೆಡಿಸುತ್ತದೋ, ಆ ಕ್ಷಣ ನಿಮ್ಮ ಇಡೀ ದಿನ ಹಾಳಾದಂತೆ ! ಸೊರಗಿಹೋದಂತೆ 🙂 ಹಾಗಾಗಿ ವೈಯಕ್ತಿಕವಾಗಿ ವಿಷಯಗಳನ್ನು ತೆಗೆದುಕೊಳ್ಳಬಾರದು.

೨. ದೊಡ್ಡದಾಗಿ ಯೋಚಿಸೋಣ

ಒಮ್ಮೆ ದೊಡ್ಡ ಮನಸ್ಸಿನಿಂದ ಯೋಚನೆ ಮಾಡಿ, ಈ ಕ್ಷಣದಲ್ಲಿ ಒಬ್ಬರು ನಿಮ್ಮನ್ನು ನಿಂದಿಸಿ, ಹೀಯಾಳಿಸಿ, ಮನ-ನೋಯುವಂತೆ ಮಾತಾಡುತ್ತಿದ್ದಾರೆ !, ಅದೇ ವ್ಯಕ್ತಿ ಬೇರೆ ಸಮಯದಲ್ಲಿ ಈ ರೀತಿ ವರ್ತಿಸುವುದಿಲ್ಲ.  ಅವರಿಗೂ ಪೋಷಕರಿದ್ದಾರೆ, ಅವರನ್ನೂ ಪ್ರೀತಿಸುವವರಿದ್ದಾರೆ, ನಿಸ್ಸಂಶಯವಾಗಿ ಅವರೂ ಕೂಡ ಈ ಸಮಯದಲ್ಲಿ ಕೆಟ್ಟ ಘಳಿಗೆಗಳಿಂದ ಸೋತಿದ್ದಾರೆ, ಅವರಿಗೂ ಕೆಟ್ಟ ಸಮಯ ಕಾಡುತ್ತಿದೆ.  ಇವೆಲ್ಲವೂ ಈ ಪ್ರಪಂಚದ ದೊಡ್ಡ ಯೋಜನೆಯ ಒಂದು ಭಾಗ. ಎಲ್ಲರಂತೆ ಅವರಿಗೂ ಮೌಲ್ಯವಿದೆ.

೩. ನಿಂದಿಸುತ್ತಾ ಜೀವಿಸುವುದರಲ್ಲಿ ಏನು ಅರ್ಥ?

ನಾವು ಪ್ರತಿದಿನ, ಶ್ರೀಮಂತ-ಬಡವ, ಯುವಕ-ಮುದುಕ, ಯೌವನ-ಮುದಿತನ, ಸಕಾರಾತ್ಮಕ-ನಕಾರಾತ್ಮಕ ಹೀಗೆ ಹತ್ತು ಹಲವರ ನಡುವೆ ನಾವು ಬದುಕುತ್ತಿದ್ದೇವೆ.  ಹೀಗಿರುವಾಗ ಒಟ್ಟಿಗೆ ಇರುವ ಸಂದರ್ಭದಲ್ಲಿ ಎಲ್ಲದರಲ್ಲಿಯೂ ತಪ್ಪು ಹುಡುಕುವ ಕೆಲಸ ಮಾಡಬಾರದು. ದಿನವೂ ಇವರೆಲ್ಲರೊಡನೆ ಬದುಕಬೇಕಾಗಿದೆ, ಜೀವನದ ಕಷ್ಟ-ಸುಖವನ್ನು  ತಿಳಿಯದೇ ನಿಂದಿಸುತ್ತಾ ಜೀವಿಸುವುದರಲ್ಲಿ ಏನು ಅರ್ಥ? ಅಲ್ಲವೇ ?

೪. ಶಾಂತಿಯಿಂದಿರಿ, ಶಾಂತಿಯುತವಾಗಿ ಬದುಕು ನಡೆಸಿರಿ

ಎಲ್ಲ ಸಂದರ್ಭದಲ್ಲೂ ಸಮಾಧಾನವಾಗಿರಿ, ವಿಚಲಿತರಾಗಬೇಡಿ.  ನಕಾರಾತ್ಮಕ ವ್ಯಕ್ತಿಗಳಿಂದ ನಾವುಗಳು ಮಾಡುವ ‘ಮಾಹಾ-ತಪ್ಪು’ ಏನೆಂದರೆ, ನಾವು ಅವರ ಮಾತುಗಳಲ್ಲಿ ಸಿಲುಕಿಕೊಂಡು ಅವರ ನಕಾರಾತ್ಮಕ ಶಕ್ತಿಯನ್ನು ನಾವು ಹೀರಿ ಸಂದರ್ಭವನ್ನು ಇನ್ನಷ್ಟು ಕಷ್ಟಕರ ಮಾಡುತ್ತೇವೆ. ಸಮಾಧಾನದಿಂದ, ಶಾಂತಿಯಿಂದ ವರ್ತಿಸಿರಿ.  ಮಾತಿನ ಚಕಮಕಿಯಲ್ಲಿ ಸಿಲುಕಿದಾಗ ಸರಿಯಾದ ಸಮತೋಲನ ಕಂಡುಕೊಂಡು ನಕಾರಾತ್ಮಕ ಶಕ್ತಿಯನ್ನು ನಿಮ್ಮಿಂದ ದೂರ ತಳ್ಳಿರಿ.  ಒಂದುವೇಳೆ ನೀವು ಸ್ಥಿಮಿತ/ಸಮಾಧಾನ ಕಳೆದುಕೊಂಡರೆ ಮೊದಲನೆಯದಾಗಿ ನೀವೇ ಸಮಸ್ಯೆಯನ್ನು ಉಲ್ಬಣ ಮಾಡುತ್ತೀರ, ಹಾಗು ನಿಮ್ಮನ್ನು ನೀವು ಕಳೆದುಕೊಂಡಂತೆ.

ಇಂತಹ ಸಂದರ್ಭದಲ್ಲಿ ನೀವು ನೀವಾಗಿರಿ, ತಾಳ್ಮೆಯಿಂದಿರಿ, ಆರಾಮವಾಗಿರಿ ಅನ್ಯರ ನಕಾರಾತ್ಮಕ ಶಕ್ತಿ ನಿಮ್ಮನ್ನು ತಗಲುವುದಿಲ್ಲ.  ನಿಮ್ಮ ಶಾಂತತೆ, ಪ್ರಶಾಂತತೆ ನಿಮ್ಮನ್ನು ನಿಂದಿಸುವವರನ್ನು ಹಾಗು ನಿಮ್ಮನ್ನು ಆರಾಮ ಮಾಡುತ್ತದೆ, ಹಗುರ ಮಾಡುತ್ತದೆ.

೫. ಇನ್ನಷ್ಟು ಸಕಾರಾತ್ಮಕವಾಗಿ ವರ್ತಿಸಿ

ನಿಂದಿಸುವ ವ್ಯಕ್ತಿಯು ಮನಬಂದಂತೆ ವರ್ತಿಸುತ್ತಿದ್ದವೇಳೆಯಲಿ ಇನ್ನಷ್ಟು ಸಕಾರಾತ್ಮಕವಾಗಿ ವರ್ತಿಸಿ.  ಬೇರೆಯವರ ನಕಾರಾತ್ಮಕ ಶಕ್ತಿಯನ್ನು ನಿಮ್ಮ ಸಕಾರಾತ್ಮಕ ಶಕ್ತಿಯು ನೀಗಬಲ್ಲದು.  ಇದು ಸತ್ಯ.

೬. ಸನ್ನಿವೇಶವನ್ನು ಕಡೆಗಣಿಸಿ

ಕಡು-ಕಹಿ ಅನುಭವಿಸಿದ ಪ್ರಸಂಗವನ್ನು / ಸನ್ನಿವೇಶವನ್ನು ಕಡೆಗಣಿಸಿ ಹಾಗು ಕೆಲವೋಮ್ಮೆ ಕಹಿಯಾದ ಅನುಭವಕ್ಕೆ ಕಾರಣರಾದ ವ್ಯಕ್ತಿ ವಿಚಾರಗಳಿಂದ ದೂರವಿರುವುದೇ ಸೂಕ್ತ ಮತ್ತು ಸಮಂಜಸ.  ಯಾರೂ ಅವರೊಂದಿಗೆ ಜಗಳವಾಡಲು / ಮಾತಿಗೆ-ಮಾತು ಬೆಳೆಸಲು ಇಲ್ಲದಿದ್ದಾಗ ಅವರೇ ಯೋಚನೆ ಮಾಡುತ್ತಾರೆ, ಸ್ವಲ್ಪ ನಿಧಾನವಾದರೂ ಅವರಿಗೆ ತಾವು ಅತಿ-ಪ್ರತಿಕ್ರಿಯೆ( overreact ) ಮಾಡಿರುವುದು ತಿಳಿಯುತ್ತದೆ, ಇದು ಅವರ ಸಮಸ್ಯೆ ನಿಮ್ಮದಲ್ಲ.

೭. ನೈಜತೆಯಿಂದ ಕೂಡಿದ ಹಾಗು ಸ್ವಾಭಾವಿಕ ಮನಸ್ಸಿನಿಂದ ಪ್ರತಿಕ್ರಯಿಸಿ

ಕೆಟ್ಟ ಸಂದರ್ಭ, ಕೆಟ್ಟ ನಾಲಿಗೆಯ, ಕೆಟ್ಟ ಮನಸ್ಸಿನ ಮನುಷ್ಯರೊಂದಿದೆ ಸ್ಪಂದಿಸುವಾಗ, ನೈಜತೆಯಿಂದ ಕೂಡಿದ ಹಾಗು ಸ್ವಾಭಾವಿಕ ಮನಸ್ಸಿನಿಂದ ಪ್ರತಿಕ್ರಿಯಿಸಿ.  ನಿಮ್ಮ ಸಮಯಯನ್ನು ಮನಸ್ಸಿನಲ್ಲಿಟ್ಟುಕೊಂಡು, ಸರಿಯಾಗಿ ಯೋಚಿಸಿ ಮಾತನಾಡಿ.  ನಿಮ್ಮನ್ನು ಪ್ರಚೋದಿಸಲೆಂದೇ ಕೆಲವು ಕೆಟ್ಟ ಮಾತುಗಳನ್ನಾಡುವುದುಂಟು, ಶಾಂತತೆಯಿಂದ ವರ್ತಿಸಿ.  ನಿಮ್ಮನ್ನು ನೀವು ಶಾಂತಿಯುತವಾಗಿ ನೋಡಿಕೊಳ್ಳುವುದರಿಂದ ಅಲ್ಲಿಯ, ಆ ಸಂದರ್ಭದ ಶಾಂತಿಯನ್ನೂ ನೀವು ಕಾಪಾಡಿರುತ್ತೀರ, ಅಂದರೆ, ನಿಮ್ಮ ಶಾಂತತೆ ಜಗಳದ ಸಂದರ್ಭವನ್ನು , ಸಿಟ್ಟಿನ ಸಂದರ್ಭವನ್ನು ಶಾಂತತೆಗೆ ತರುತ್ತದೆ. ನೀವು ಪ್ರತಿಕ್ರಿಯೆ ನೀಡದಿದ್ದಾಗ ಅವರ ಶಕ್ತಿ ಕುಂದುತ್ತದೆ, ಅವರನ್ನು ಶಕ್ತಿಹೀನರನ್ನಾಗಿ ಮಾಡುತ್ತದೆ.

Leave a Reply

Your email address will not be published. Required fields are marked *